ಮರ್ಡರ್​ ಮಿಸ್ಟರಿ, ಸಸ್ಪೆನ್ಸ್​ ಥ್ರಿಲ್ಲರ್​ ಮತ್ತು ಇತ್ಯಾದಿ…

 ಮರ್ಡರ್​ ಮಿಸ್ಟರಿ, ಸಸ್ಪೆನ್ಸ್​ ಥ್ರಿಲ್ಲರ್​ ಮತ್ತು ಇತ್ಯಾದಿ…


’ಇತ್ಯಾದಿ’ ಚಿತ್ರವು ಸೆನ್ಸಾರ್‌ಗೆ ಹೋಗಲು ಅಣಿಯಾಗುತ್ತಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಚರಣ್‌ದೇವ್ ಕ್ರಿಯೇಶನ್ಸ್-ಅದ್ವೈತ ಫಿಲಿಂಸ್-ನೀಲಕಂಠ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.

ಉಳಿ ಮತ್ತು ಇತ್ಯಾದಿ ಚಿತ್ರತಂಡದ ಜತೆ ನಟ ಪ್ರಥಮ್​


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ವಿಜೇತ, ನಟ,ನಿರ್ದೇಶಕ ಪ್ರಥಮ್ ಮಾತನಾಡಿ, ತುಣುಕುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಡಿ.ಯೋಗರಾಜ್ ಅವರಿಗೆ ಯೋಗ ಹುಡುಕಿಕೊಂಡು ಬರಲಿ. ನಿನ್ನೆಯಷ್ಟೇ ವಿಕಟಕವಿ ಯೋಗರಾಜಭಟ್ ಅವರ ಚಿತ್ರದ ಸಮಾರಂಭ ನಡೆದಿದೆ. ಇಂದು ಡಿ.ಯೋಗರಾಜ ಅವರದಾಗಿದೆ. ಭಟ್ಟರು ಗೊಂದಲ ಆಗಬಾರದೆಂದು ಮೀಸೆ ತೆಗೆಸಿಕೊಂಡಿದ್ದಾರೆ ಎಂದು ಅತಿಥಿಗಳನ್ನು ನಗಿಸಿದರು. ಮಾತು ಮುಂದುವರೆಸುತ್ತಾ ಪ್ರತಿಭಾವಂತ ತಂಡ ಕೆಲಸ ಮಾಡಿದೆ. ಹಿಂದೆಯೆಲ್ಲಾ ಒಂದು ಸಿನಿಮಾ ತೆರೆಗೆ ಬರುವ ಸಮಯದಲ್ಲಿ ಹೊಸ ನಿರ್ಮಾಪಕರು ಪರಿಚಯವಾಗುತ್ತಿದ್ದರು. ಅದೇ ರೀತಿ ಇಂದು ಆಗುತ್ತಿರುವುದು ಸಂತಸ ತಂದಿದೆ. ನಿಮ್ಮಲ್ಲಿರುವ ಕ್ರಿಯಾಶೀಲತೆಗೆ ಮತ್ತಷ್ಟು ಒಳ್ಳೆಯ ಚಿತ್ರಗಳು ಬರಲಿ. ನನ್ನ ಕಡೆಯಿಂದ ನಿಮ್ಮಗೆಲ್ಲರಿಗೂ ಶುಭಹಾರೈಕೆಗಳು ಎಂದರು.

ಇತ್ಯಾದಿ ಚಿತ್ರತಂಡ


ಸಿನಿಮಾಗೆ ನಿರ್ದೇಶನ ಮಾಡಿರುವ ಡಿ.ಯೋಗರಾಜ್ ಹೇಳುವಂತೆ ಇದೊಂದು ಮರ್ಡರ್ ಮಿಸ್ಟ್ರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಶೇಕಡ ೭೫ರಷ್ಟು ಕಾಲ್ಪನಿಕ, ಉಳಿದವು ಸತ್ಯ ಘಟನೆಯಾಗಿರುತ್ತದೆ. ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟಿಕೊಂಡಿರುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇರುತ್ತದೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ ನಡೀತಾ ಇದೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುಂದರ ತಾಣಗಳಲ್ಲಿ62 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ ಅಂತ ಮಾಹಿತಿ ತೆರೆದಿಟ್ಟರು.


ನಾಯಕರುಗಳಾದ ಮಹೇಶ್.ಬಿ, ಸಚ್ಚಿನ್, ನಾಯಕಿಯರಾದ ಅರ್ಚನಾಉದಯಕುಮಾರ್, ಡಾ.ಸೌಮ್ಯ ಅವಕಾಶ ನೀಡಿದ್ದಕ್ಕೆ ಥಾಂಕ್ಸ್ ಎಂದಷ್ಟೇ ಹೇಳಿದರು. ತಾರಗಣದಲ್ಲಿ ಆಂಜನಪ್ಪ, ತಮಿಳು ಖ್ಯಾತ ನಟ ನಾಗೇಶ್ ಪುತ್ರ ಆನಂದಬಾಬು, ಮಂಜುಳಾವೆಂಕಟೇಶ್,ಮಣಿ ಮುಂತಾದವರು ನಟಿಸಿದ್ದಾರೆ. ಎರಡು ಹಾಡುಗಳಿಗೆ ಸಂಗೀತ ಪುಣ್ಯೇಶ್, ಛಾಯಾಗ್ರಹಣ ಭರಣಿ-ಡಿ.ಯೋಗರಾಜ್-ಲಕ್ಷೀಕಾಂತ್, ಸಂಕಲನ ಸಂತೋಷ್ ನಿರ್ವಹಿಸಿದ್ದಾರೆ.
ನಂತರ ಡಿ.ಯೋಗರಾಜ್ ನಿರ್ದೇಶನ ಮಾಡುತ್ತಿರುವ ’ಉಳಿ’ (ULI) ಸಿನಿಮಾದ ಪೋಸ್ಟರ್‌ನ್ನು ಪ್ರಥಮ್ ಅನಾವರಣಗೊಳಿಸಿದರು. ಪುತ್ರ ಶ್ರೀರಾಂಅಭಿಷೇಕ್ ಅವರನ್ನು ನಾಯಕ ಮಾಡುವ ಸಲುವಾಗಿ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದು, ಇವರೊಂದಿಗೆ ನಿರ್ದೇಶಕರು ನಿರ್ಮಾಣದಲ್ಲಿ ಕೈ ಜೋಡಿಸುತ್ತಿದ್ದಾರೆ. ಕಲಾವಿದರುಗಳಾದ ಸುರಕ್ಷಿತ, ಅರ್ಚನಾಉದಯಕುಮಾರ್, ಮಂಜುಳಾವೆಂಕಟೇಶ್ ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದಾರೆ. ಸಂಗೀತ ಸ್ಪುಗೆನ್ ಪೌಲ್, ಸಂಕಲನ ಶಂಕರ್, ಛಾಯಾಗ್ರಹಣ ದೇವರಾಜ್, ರಚನೆ-ಸಂಭಾಷಣೆ ಶಂಕರ್‌ಸನ್ ಅವರದಾಗಿದೆ. ನೀಲಕಂಠ ಫಿಲಂಸ್ ಬ್ಯಾನರ್‌ದಲ್ಲಿ ಚಿತ್ರವು ಸಿದ್ದಗೊಳ್ಳುತ್ತಿದೆ.

cinibeat