ಹೊಯ್ಸಳ ಚಿತ್ರದ ಬಲಿಗೆ ಹುಟ್ಟುಹಬ್ಬದ ಸಂಭ್ರಮ – ಕ್ಷೇತ್ರಪತಿಯಾದ ನವೀನ್ ಶಂಕರ್
![ಹೊಯ್ಸಳ ಚಿತ್ರದ ಬಲಿಗೆ ಹುಟ್ಟುಹಬ್ಬದ ಸಂಭ್ರಮ – ಕ್ಷೇತ್ರಪತಿಯಾದ ನವೀನ್ ಶಂಕರ್](https://cinibeat.com/wp-content/uploads/2023/05/WhatsApp-Image-2023-05-25-at-4.29.49-PM-850x560.jpeg)
![](https://cinibeat.com/wp-content/uploads/2023/05/WhatsApp-Image-2023-05-25-at-4.29.48-PM.jpeg)
“ಗುಲ್ಟು”, ” ಹೊಯ್ಸಳ “, ” ಹೊಂದಿಸಿ ಬರೆಯಿರಿ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ನವೀನ್ ಶಂಕರ್ ಪ್ರಸ್ತುತ “ಕ್ಷೇತ್ರಪತಿ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ನವೀನ್ ಶಂಕರ್ ಅವರಿಗೆ ಈಗ ಹುಟ್ಟುಹಬ್ಬದ ಸಂಭ್ರಮ. ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ “ಕ್ಷೇತ್ರಪತಿ” ತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. KRG ಸ್ಟುಡಿಯೋಸ್ ಮೂಲಕ ಬಿಡುಗಡೆಯಾಗುತ್ತಿದೆ.
ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. “ಕ್ಷೇತ್ರಪತಿ” ಸೋಶಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
![](https://cinibeat.com/wp-content/uploads/2023/05/WhatsApp-Image-2023-05-25-at-4.29.49-PM-1.jpeg)
ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.